Thursday, 23 January 2014

ಭೀಮೇಶ್ವರ (ಸಕಲೇಶಪುರ)


ಇಲ್ಲಿ ಹರಿಯುತ್ತಿರುವುದು ಎತ್ತಿನ ಹಳ್ಳ. ಮುಂದೆ ಇದೇ ಕೆಂಪು ಹೊಳೆ, ನಂತರ ನೇತ್ರಾವತಿ. ಮೇಲೆ ಹೋಗುತ್ತಿದೆ ನೋಡಿ ಗೂಡ್ಸ್ ರೈಲು, ಅದು ಇಲ್ಲಿಂದ ಮುಂದೆ ಸಾಗಿ ದೋಣಿಗಲ್ಲು, ಮಾರನಹಳ್ಳಿ, ಎಡಕುಮರಿ ಮುಖಾಂತರ ಸುಬ್ರಹ್ಮಣ್ಯ ತಲುಪುತ್ತದೆ. ಈ ರೈಲು ದಾರಿಯಲ್ಲಿ ೫೦-೫೫ ಸುರಂಗಗಳು ಅಷ್ಟೇ ಸೇತುವೆಗಳು ಸಿಗುತ್ತವೆ. ಅತಿ ಹೆಚ್ಚು ಅಂದರೆ ಒಂಬೈನೂರು ಮೀಟರ್‍ ಉದ್ದದ ಸುರಂಗವೊಂದಿದೆ. ಮಧ್ಯ ಸುರಂಗದಲ್ಲಿ ಇದ್ದರೆ ಹಿಂದೆಯೂ, ಮುಂದೆಯೂ ಬೆಳಕು ಗೋಚರಿಸುವುದೇ ಇಲ್ಲ. ನೂರಕ್ಕೆ ನೂರು ಕತ್ತಲಾಗಿರುತ್ತದೆ. ಕಣ್ಣುಗಳು ವ್ಯರ್ಥ ಎನ್ನಿಸುವಂತಹ ಅನುಭವ.
    ಇಲ್ಲ ಬಿಡಿ, ನೀವು ಇಲ್ಲಿ ನನ್ನ ಹಾಗೆ ಭೀಮೇಶ್ವರನ ಸನ್ನಿಧಿಯಲ್ಲಿ (ಭೀಮ ಪೂಜಿಸಿದ್ದರಿಂದ ಶಿವನಿಗೆ ಆ ಹೆಸರು)  ನಿಂತು ಈ ದೃಶ್ಯವನ್ನು ನೋಡುವಂತಿಲ್ಲ. ಯಾಕೆ ?
    " ಯಾಕೆಂದರೆ, ಇದು ನಮ್ಮ ಸ್ವಂತ ಪ್ರೈವೇಟ್ ಜಾಗ. ನಮಗೆ ಯಾಕೆ ರಿಸ್ಕು ಸುಮ್ಮನೆ. ನಾವು ಗೌರ್‍ಮೆಂಟಿಂದ ಯಾವುದೇ ಸಹಾಯ ತಗೊಂಡಿಲ್ಲ.'' ಎನ್ನುತ್ತಾರೆ ಆ ಎಸ್ಟೇಟಿನ ಒಡೆಯ ವಿಜಿ. ಪಾಪ ಅವರು ಸಕಲೇಶಪುರದ ನಿರಂಜನ ಅವರ ಕೋರಿಕೆಯ ಮೇರೆಗೆ ನಮಗೆ ಅಲ್ಲಿಗೆ ಹೋಗಲು ಅನುವು ಮಾಡಿಕೊಟ್ಟರು.
    ಏನಪ್ಪಾ ಹಳ್ಳದ ತೀರದಲ್ಲಿರುವ ದೇವರನ್ನು ನೋಡುವುದಕ್ಕೂ ಇವರದೇನಪ್ಪಾ ತಕರಾರು ಎಂದು ನೀವಂದುಕೊಳ್ಳಬಹುದು ಇಲ್ಲ ಇವರು ಮೊದಲಿಂದ ಹೀಗೆ ರಫ್ ಆಗಿದ್ದವರಲ್ಲ. ಜನ ಸಹಜವಾಗಿ ಬಂದು ನೀರಲ್ಲಿ ಕೈಕಾಲು ತೊಳೆದೋ, ಸ್ನಾನ ಮಾಡಿಯೋ ದೇವರ ದರ್ಶನ ಮಾಡಿ ಹೋಗುತ್ತಿದ್ದರು. ಬರ ಬರುತ್ತಾ ಪ್ರವಾಸೋದ್ಯಮ, ನಾಗರೀಕತೆ ಬೆಳೆದಂತೆ (ಇದು ವಿಪರ್‍ಯಾಸ) ಬೇರೆಯದೇ ತರದ ಜನ ಬರತೊಡಗಿದರು. ಆಗ ಇವರಿಗೆ ಸ್ವಲ್ಪ ಕಿರಿಕಿರಿಯಾದರೂ ಸಹಿಸಿಕೊಂಡು ಬರತೊಡಗಿದರು. ಯಾಕೆಂದರೆ ಪ್ರಕೃತಿ ಸಹಜವಾದ ಸೌಂದರ್ಯವನ್ನು, ದೇವರನ್ನು ನೋಡಲು ತಡೆಯುವುದು ಸರಿಯಲ್ಲ ಎಂದು.
    ಆಮೇಲಾಮೇಲೆ ಎಲ್ಲ ಅತಿಯಾಗತೊಡಗಿತು. " ಡ್ರಿಂಕ್ಸ್ ತಗೊಳ್ಳೋದು, ನಾನ್,  ವೆಜ್ ಮತ್ತೆ ಹುಡ್ಗೀರು, ಡ್ಯಾನ್ಸು. ಇಲ್ಲೆಲ್ಲ ಎಷ್ಟು ಗಲೀಜು ಮಾಡ್ತಾರೆ ಅಂದ್ರೆ ನಮಗೆ ಅದನ್ನು ಕ್ಲೀನ್ ಮಾಡ್ಲಿಕ್ಕೆ ಒಂದು ದಿನ ಸಾಕಾಗುವುದಿಲ್ಲ. ಮತ್ತೆ ನಮ್ಮ ಕೆಲಸದವರೂ ಅಷ್ಟೇ ಬೇರೆಯವರು ತಿಂದ ಗಲೀಜನ್ನೆಲ್ಲಾ ಕ್ಲೀನು ಮಾಡ್ಲಿಕ್ಕೆ ಒಪ್ಪಲ್ಲ. ಎಂತೆಂಥದೋ ರಿಸ್ಕು"  ಇವರು ಕಾನೂನಿನ ತೊಡಕಿನಲ್ಲಿ ಸಿಲುಕಿಕೊಂಡದ್ದೂ ಉಂಟಂತೆ ಪಾಪ.
    "ಇದರ ಸಾವಾಸವೇ ಬೇಡ ಅಂತೇಳಿ ಕಾಂಪೌಂಡ್ ಮಾಡ್ಸಿ ಗೇಟಿಗೆ ಬೀಗ ಹಾಕಿದ್ದೇವೆ." ಅಂದು ನಿರಾಳರಾದರು. ಅಲ್ಲಿ ಆಗಾಗ ಸಾಂಪ್ರದಾಯಿಕ ಭಕ್ತರ ಮದುವೆಂತಹ ಸಮಾರಂಭಗಳು ಸರಳವಾಗಿ ಈಗಲೂ ನಡೆಯುತ್ತವೆ. ದೇವಸ್ಥಾನಕ್ಕೆ ಗರ್ಭ ಗುಡಿಯಿಲ್ಲ. ಮೇಲ್ಚಾವಣಿಯ ದೇವಸ್ಥಾನ. ಗೋಡೆಗಳಿಲ್ಲ. ತುಂಬ ಪ್ರಶಾಂತವಾದ ವಾತಾವರಣ. ಸುತ್ತ ಕಾಫಿ ತೋಟ.


ನಾನು ತಿರುಪತಿಗೆ ಹೋಗಿದ್ದಾಗಲೂ ಹುಂಡಿಗೆ ಕಾಣಿಕೆ ಹಾಕಿದವನಲ್ಲ. ತಿಮ್ಮಪ್ಪನಂಥ ದೇವರಿಗೆ ನಾನು ಕೊಡಲು ಶಕ್ತನೇ. ನನ್ನ ಸಾಲವನ್ನು ಮನಸ್ಸು ಮಾಡಿದರೆ ತಿಮ್ಮಪ್ಪ ತೀರಿಸಬಹುದೇ ಹೊರತು, ತಿಮ್ಮಪ್ಪನ ಸಾಲವನ್ನು ತೀರಿಸಲು ನಾನು ಸಹಾಯ ಮಾಡುತ್ತೇನೆನ್ನುವುದು ಅಹಂಕಾರವಾದೀತು. ಆದರೆ ಇಲ್ಲಿನ ವಾತಾವರಣ ನೋಡಿ ಮನಸ್ಸು ಪ್ರಫುಲ್ಲವಾಯಿತು. ತಣ್ಣಗೆ ಕೂತು ಧ್ಯಾನ ಮಾಡಲು ಹೇಳಿ ಮಾಡಿಸಿದ ವಾತಾವರಣ. ನೀರು ಹರಿಯುವ ಶಬ್ದ. ತೋಟದಲ್ಲಿ ಹಕ್ಕಿಗಳ ಚಿಲಿಪಿಲಿ -ಅರ್ಥವಾಗದ ಆದರೆ ಅನಿರ್ವಚನೀಯ ಅನುಭವ ನೀಡುವ - ಮಾತುಕತೆ. ಹುಂಡಿಯಲ್ಲಿ ಒಂದು ನೋಟು ತುರುಕಿ, ನಮಸ್ಕರಿಸಿದೆ. ದೇವರಿಗಲ್ಲ ಅಲ್ಲಿನ ಪರಿಸರಕ್ಕೆ.
 


ವಾಪಾಸು ಮೇಲೆ ಹತ್ತಿ ಬರುವಾಗ ನಮಗೆ ಬಾಯಾರಿಕೆ ಆಗುತ್ತಿತ್ತು. ಆದರೆ ಅವರು ಸ್ಮೂತ್ ಆಗಿದ್ದರು. " ನೋಡಿ ಇವರೇ, ನಿಮ್ಮಂತವರು ಬಂದರೆ ಪರವಾಗಿಲ್ಲ. ಒಮ್ಮೆ ನೋಡಿ ಐದಾರು ಜನ ಬಂದ್ರು. ಹೀಗೆ ಯಾರೋ ಪರಿಚಯದ ರೆಸಾರ್ಟ್‌ನವರು ಕಳುಹಿಸಿದ್ದರು. ಒಂದರ್ಧ ಗಂಟೆ ಇದ್ದು ಹೋಗ್ತೇವೆ ಅಂದ್ರು. ಮಧ್ಯಾಹ್ನ ಹನ್ನೆರಡಕ್ಕೆ ಬಂದವರು ಸಂಜೆ ಐದಾದರೂ ಹೊರಡುವ ಸೂಚನೆಯೇ ಇಲ್ಲ. ಹೋಗಿ ಕೇಳಿದ್ರೆ " ರೀ ನಾವು ಹಣ ಕೊಟ್ಟು ಬುಕ್ ಮಾಡಿ ಬಂದಿದ್ದೇವೆ. ನೀವ್ಯಾರ್‍ರೀ ಕೇಳೊಕೆ ಅಂತ ನಮಗೇ ದಬಾಯಿಸಿದ್ರು." ......  ಅವರವರ ಕಷ್ಟ ಅವರವರಿಗೆ. ನಾವು ಯಾರದೋ ಜಾಗದಲ್ಲಿದ್ದೇವೆ ಅಂದುಕೊಂಡು ಮನಸೋಇಚ್ಛೆ ವರ್ತಿಸಬಾರದೆನ್ನುವ ಪ್ರಜ್ಞೆ ನಮಗೂ ಇರಬೇಕು. ನಾವು ನೋಟಕ್ಕೆ ಮಾತ್ರ ನಾಗರೀಕರು. ನಡವಳಿಕೆಯಲ್ಲೂ ಅದನ್ನು ಅನುಸರಿಸಬೇಕಲ್ಲವೇ ? ಅವರಿಗೆ ವಂದನೆಗಳನ್ನು ಹೇಳಿ ಹೊರಟೆವು.

No comments:

Post a Comment