Saturday, 1 October 2016

ಕಾವೇರಿ

ಈ ಋತುಮಾನದ ನೀರಿಗಾಗಿ ಶುರುವಾದ ಕಾವೇರಿ ತಗಾದೆ, ಅಂತಿಮವಾಗಿ ಕಾವೇರಿಯ ಜೀವಮಾನದಲ್ಲಿಯೇ ಕಾವೇರಿ ನಮ್ಮದಲ್ಲ ಎಂಬಲ್ಲಿಗೆ ಬಂದು ನಿಂತಿದೆ. ರಂಗದ ಮೇಲೆ ಪ್ರದರ್ಶನಗೊಳ್ಳುವ ನಾಟಕ ರೂಪವೊಂದು ಹೊಸ ನೋಡುಗನಿಗೆ ಕುತೂಹಲ ಕೆರಳಿಸುತ್ತಾ ಸಾಗಿ ಅನಿರೀಕ್ಷಿತ ದೃಶ್ಯವೊಂದರಲ್ಲಿ ಅಂತಿಮಗೊಳ್ಳುವ ಹಾಗೆ ಕಂಡರೂ ಅದೆಲ್ಲ ಮೊದಲೇ ಪ್ರಕಟಿತ ಕೃತಿಯೊಂದರಿಂದ ಪೂರ್ವ ನಿರ್ಧರಿತವಾಗಿರುತ್ತದೆಯಷ್ಟೇ. ಹಾಗೇ ಈ ನಮ್ಮ ಕಾವೇರಿ ತಗಾದೆಯೂ ನೀರು ಬೇಕು, ನೀರು ಬೇಕು ಎಂಬ ಬೇಡಿಕೆಯಿಂದ ಪ್ರಾರಂಭವಾಗಿ ಕಡೆಗೆ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆಯ ಆದೇಶದೊಂದಿಗೆ (ಅದೂ ಕೇವಲ ನಾಲ್ಕು ದಿನಗಳೊಳಗೆ) ಬೇರೆಯದೇ ರೂಪದಲ್ಲಿ ಬಂದು ನಿಂತಿದೆ. ತಮಿಳ್ನಾಡಿನ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತಾಗಿದೆ.
    ಆದರೆ ಕೂಲಂಕುಶವಾಗಿ ನೋಡಿದಾಗ ಇದೆಲ್ಲ ಒಂದು ಪೂರ್ವ ನಿರ್ಧರಿತ ಘಟನೆಯ ಹಾಗೆ ಕಾಣುತ್ತದೆ. ತಮಿಳ್ನಾಡು ಹಲವಾರು ಟಿ.ಎಂ.ಸಿ. ಗಳ ನೀರಿಗಾಗಿ ಬೇಡಿಕೆ ಸಲ್ಲಿಸುತ್ತದೆ. ಕಡೆಗೆ ದಿನಕ್ಕೆ ಇಪ್ಪತ್ತು ಸಾವಿರ ಕ್ಯೂಸೆಕ್ಸ್ ಆದರೂ ಬಿಡಬೇಕೆನ್ನುತ್ತದೆ. ಕರ್ನಾಟಕ ಹತ್ತು ಸಾವಿರಕ್ಕೆ ತಯಾರಿರುತ್ತದೆ. ಕೊನೆಯಲ್ಲಿ ಹದಿನೈದು ಸಾವಿರ ಆದೇಶವಾಗುತ್ತದೆ.  ಕರ್ನಾಟಕ ಹದಿನೈದು ಸಾವಿರ ಕ್ಯೂಸೆಕ್ಸ್ -ದಿನಕ್ಕೆ- ನೀರು ಹರಿಸುತ್ತಲೇ ಅದರ ಪುನರ್‍ ಪರಿಶೀಲನೆ ಅರ್ಜಿ ಸಲ್ಲಿಸುತ್ತದೆ. ಆದರೆ ಆಗ ಮೊದಲು ಬಿಡಬೇಕಾಗಿದ್ದಕ್ಕಿಂತ ಹೆಚ್ಚು ನೀರು ಬಿಡಲು ಹೇಳಲಾಗುತ್ತದೆ. ನಂತರ ಉಸ್ತುವಾರಿ ಸಮಿತಿ ದಿನವೊಂದಕ್ಕೆ ಮೂರು ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತ ಹೇಳುತ್ತದೆ. ಈ ಸಂದರ್ಭದಲ್ಲಿ ತನ್ನ ನಿರ್ದೇಶನದನ್ವಯ ರಚನೆಯಾದ ಉಸ್ತುವಾರಿ ಸಮಿತಿಯ ಆದೇಶವನ್ನೂ ಮಾರ್ಪಡಿಸಿ ಅದನ್ನು ಮೀರಿ ಆರು ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಆಜ್ಞೆ ಬರುತ್ತದೆ. ಆಗ ಕರ್ನಾಟಕ ವಿಧಾನ ಮಂಡಲಗಳು ಕುಡಿಯುವುದಕ್ಕೆ ಬಿಟ್ಟು ಇನ್ಯಾವುದಕ್ಕೂ ನೀರು ಹರಿಸಬಾರದು ಎಂದು ತೀರ್ಮಾನ ಕೈಗೊಳ್ಳುತ್ತವೆ.
     ನಂತರ ಪ್ರತಿ ಕ್ಷಣ ಎಲ್ಲರ ಚಿತ್ತವೂ ಈ ಸುತ್ತುವುದು ನ್ಯಾಯಾಲಯ ನಿಂದನೆಯ ವಿಚಾರವೇ ! ಈ ವಿಧಾನಮಂಡಲದ ತೀರ್ಮಾನ ನ್ಯಾಯಾಂಗ ನಿಂದನೆಯಾಗುತ್ತದೆಯೇ ? ಹಾಗಾದರೆ ಏನಾಗುತ್ತದೆ ? ಸರ್ಕಾರದ ವಜಾವೇ ? ಮುಖ್ಯಸ್ಥರ ಬಂಧನವೇ ? ರಾಷ್ಟ್ರಪತಿ ಆಡಳಿತವೇ ? ನಮ್ಮ ಜಲಾಶಯಗಳ ಸುತ್ತ ಮಿಲಿಟರಿ ಕಾವಲು ಹಾಕಿ ನೀರು ಬಿಡಲಾಗುತ್ತದೆಯೇ ? ಆದರೆ ಅದು ಗಣನೆಗೇ ಬರದೆ ಇಡೀ ಪ್ರಕರಣದಲ್ಲಿ ಎಲ್ಲೂ ಬೇಡಿಕೆಯಲ್ಲಿಲ್ಲದ ಕಾವೇರಿ ನೀರು ನಿರ್ವಹಣಾ ಮಂಡಳಿಯ ರಚನೆ ಮಾಡಬೇಕಾಗಿ ಬರುತ್ತದೆ.
    ಈ ಮಧ್ಯ ಕೇಂದ್ರದ ಮಧ್ಯಸ್ಥಿಕೆಯಲ್ಲೊಂದು ಸಭೆ, ಕರ್ನಾಟಕದಿಂದ ವಸ್ತು ಸ್ಥಿತಿ ತಿಳಿಯಿರಿ ಎಂಬ ವಾದ, ತಮಿಳ್ನಾಡಿನದು ಗೊತ್ತಿರುವಂತೆಯೇ ವಿರೋಧ, ಮುರಿದು ಬಿದ್ದ ಸಭೆ ಎಂಬ ಫಲ ಶ್ರುತಿ.
    ಕರ್ನಾಟಕ ಮೊದಲಿನಿಂದಲೂ ಕೇಂದ್ರದ ಮಧ್ಯಸ್ಥಿಕೆಗೆ ಬೇಡಿಕೆ ಇಟ್ಟಿತ್ತು. ಪ್ರಧಾನ ಮಂತ್ರಿಯವರು ನಮ್ಮ ಮುಖ್ಯ ಮಂತ್ರಿಗೆ ಭೇಟಿಗೇ ಅವಕಾಶ ಕೊಡಲಿಲ್ಲ. ಕಡೆಗೂ ಕೇಂದ್ರ ಮಧ್ಯಸ್ಥಿಕೆ ವಹಿಸಬೇಕಾಗಿ ಬಂದಾಗ ಕರ್ನಾಟಕ ಒಂದು ನಿಟ್ಟುಸಿರು ಬಿಟ್ಟಿತು. ಆದರೂ ಅದೂ ನಾಟಕವೇ ಆಯಿತೇ ? 'ನಮ್ಮ ಮಧ್ಯಸ್ತಿಕೆಯ ಸಭೆ ಅಪೂರ್ಣ' ಎಂದು ಕೇಂದ್ರ ಹೇಳಿದಾಗಲೂ ಅದಕ್ಕೆ ಮತ್ತಷ್ಟು ಸಮಯ ಕೊಡದೇ ಇನ್ನು ನಾಲ್ಕು ದಿನದೊಳಗೆ ನಿರ್ವಹಣಾ ಮಂಡಳಿ ರಚನೆ ಸಾಧ್ಯವೇ ಎಂಬ ಪ್ರಶ್ನೆ. ಅದೇ ಮೊದಲು ನಾಲ್ಕು ವಾರಗಳ ಗಡುವು ನೀಡಲಾಗಿತ್ತು. ಈಗ ನಾಲ್ಕು ದಿನದಲ್ಲಿ ಮಾಡಿ ಎಂದರೆ ಖಂಡಿತ ಸಾಧ್ಯವಿಲ್ಲ ಎಂಬ ನಮ್ಮೆಲ್ಲರ ಅನಿಸಿಕೆಯನ್ನು ಸುಳ್ಳಾಗಿಸಿ ಒಪ್ಪಲಾಗುತ್ತದೆ.
    ಕಾವೇರಿ ನ್ಯಾಯ ಮಂಡಳಿಯ ಅಂತಿಮ ತೀರ್ಪನ್ನೇ ನಾವು ಪ್ರಶ್ನಿಸಿದ್ದೇವೆ. ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಯ ವಿಚಾರ ತ್ರಿಸದಸ್ಯ ಪೀಠದ ಮುಂದಿದೆ. ಇದೆಲ್ಲವನ್ನೂ ಕಂಡೂ ಕಾಣದವರಂತೆ ವರ್ತಿಸಿದ್ದನ್ನು ನೋಡಿದರೆ ಈಗ ಹೊರಬಿದ್ದಿರುವ ನೀರು ನಿರ್ವಹಣಾ ಮಂಡಳಿ ರಚನೆಯ ವಿಚಾರವೇ ಮೊದಲಿನಿಂದಲೂ ಈ ಪ್ರಕರಣದ ಮುಖ್ಯ ವಿಷಯವಾಗಿತ್ತೇ ಎಂಬ ಅನುಮಾನ ಬರುವುದಿಲ್ಲವೇ ? ಇನ್ನು ಇದರಲ್ಲಿ ಕೇಂದ್ರ ಪಾತ್ರ, ಮಹದಾಯಿ ವಿಚಾರದಲ್ಲಾಗಲೀ, ಕಾವೇರಿ ವಿಚಾರದಲ್ಲಾಗಲೀ ಮಧ್ಯ ಪ್ರವೇಶ ನಿರಾಕರಿಸಿದ್ದ ಕೇಂದ್ರ, ನೀರು ನಿರ್ವಹಣಾ ಮಂಡಳಿ ರಚನೆ ನಾಲ್ಕೇ ದಿನದಲ್ಲಿ ಮುಗಿಸಲು ಒಮ್ಮೆಗೇ ಒಪ್ಪಿ ಬಿಟ್ಟದ್ದು ಹೇಗೆ ? ವರ್ಷದ ಹಿಂದೆ ತಮಿಳ್ನಾಡು ಮುಖ್ಯ ಮಂತ್ರಿಯವರು ಪ್ರಧಾನ ಮಂತ್ರಿಗಳನ್ನು ಭೇಟಿಯಾಗಿದ್ದಾಗಲೇ ಇದಕ್ಕೆಲ್ಲಾ ಭೂಮಿಕೆ ಸಿದ್ದ ಪಡಿಸಲು ತೀರ್ಮಾನಿಸಲಾಗಿತ್ತೇ ? ಬರೀ ಪ್ರಶ್ನೆಗಳು ಮಾತ್ರ ಉಳಿಯುತ್ತವಲ್ಲವೇ ?

Thursday, 11 August 2016

ಇಪ್ಪತ್ತೈದು ವರುಷಗಳಿಂದ ನನ್ನನ್ನು ಸಹಿಸಿಕೊಂಡ ನನ್ನವಳ ಕುರಿತು ಮದುವೆಗೆ ಮುಂಚೆ ಬರೆದ ಕವನ......

Monday, 28 March 2016

ನವ ಮನ್ವಂಥರ



ಇದು ನಮ್ಮ ಅಂಗಡಿಯ ಎದುರಿಗಿರುವ ಮರದ ಮೂರು ಚಿತ್ರಗಳು. ಮೊದಲನೆಯದು ಈ ತಿಂಗಳ ೩ ರಂದು ತೆಗೆದಿದ್ದು. ಬೇಸಿಗೆ ಬಿಸಿಲಿಗೆ ಬಾಡಿ ಹೋದ ಎಲೆಗಳು. ಉರಿ ತಾಳಲಾರದೇ ಇನ್ನೇನು ಎಲೆಗಳೆಲ್ಲ ಉದುರುವ ಸ್ಥಿತಿಯಲ್ಲಿವೆ. ಎರಡನೆಯ ಚಿತ್ರ ೨೦ ನೇ ತಾರೀಖಿನದು, ಇರುವ ಎಲ್ಲ ಎಲೆಗಳಿಗೆ ನೀರು ಒದಗಿಸಲಾರದೇ ತನ್ನೆಲ್ಲ ಎಲೆಗಳನ್ನು ಉದುರಿಸಿಕೊಂಡು ನಿಂತ ಮರ. ನಂತರದ್ದು ನೋಡಿ ೨೪ ನೇ ತಾರೀಖು ತೆಗೆದದ್ದು. ನವ ಮನ್ವಂಥರದ ಚೈತ್ರನನ್ನು ಸ್ವಾಗತಿಸಲು ಸಜ್ಜಾಗಿ ಚಿಗುರಿ ನಿಂತ ಮರ.......

ಪ್ರಕೃತಿ ತನ್ನ ಇಂಥ ಕೆಲವು ಕೆಲಸಗಳಿಂದ ನಮಗೆ ಏನೇನೋ ಪಾಠಗಳನ್ನು ಹೇಳುತ್ತಿರುವಂತಿದೆ. ಆದರೆ, ದುರಹಂಕಾರಿ ಮನುಷ್ಯ ಏನನ್ನೂ ಕೇಳಿಸಿಕೊಳ್ಳಲಾರೆ ಎನ್ನುತ್ತಿದ್ದಾನೆ... ಭೂಮಿಯ ಶಾಖವನ್ನು ಕಡಿಮೆ ಮಾಡಲು ಮೀಟಿಂಗ್ ಮೇಲೆ ಮೀಟಿಂಗ್ ಮಾಡಿ ಹೈರಾಣಾಗುತ್ತಿದ್ದಾನೆ..

ತಾಗುವುದಕ್ಕೆ ಮುನ್ನ ಬಾಗುವುದು ಮೇಲು ಎನ್ನುತ್ತಾರೆ.... ಊಹ್ಞೂ... ನಾವು ಬಾಗುವುದೇ ಇಲ್ಲ ಸರ್ವನಾಶವಾಗುವವರೆಗೂ.....


Sunday, 28 February 2016

ಹೋಗಿ ಬನ್ನಿ.......




ಹೊರಟು ನಿಂತಿದ್ದಾಳೆ ಮಗಳು
ಮದುವೆಯಾಗಿ ಮದುಮಗನ ಜೊತೆ
ಕಣ್ಣಂಚಿನ ನೀರ ಹನಿ
ಹೊಮ್ಮಿಸಿದ್ದು ಎಂಥ ಭಾವ !

ಕೋಟೆ ಬಯಲಲ್ಲಿ ಹುಟ್ಟಿ
ಪುರದಮನೆಯ ಅಂಗಳದಲ್ಲಿ
ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಬೆಳೆದ ಬಂಗಾರಿ
ಎಷ್ಟು ಎತ್ತರವಾಗಿದ್ದಾಳೆ !
ನಿನ್ನೆಯಷ್ಟೇ ಪೃಥ್ವಿಯ ಸೊಂಟದಲ್ಲಿ ಕುಳಿತು
ಅಳುತ್ತಿದ್ದ ಕಂದ ಇವಳೇ ಏನು ?

ಅವಳ ಬಾಳಲ್ಲಿ ಈಗ
ಹೊಸ ಅರುಣ ಉದಯ

ಹೋಗಿ ಬನ್ನಿ
ನಿಮ್ಮ ಬಾಳು ಬಂಗಾರವಾಗಲಿ
ನಾಡು, ನುಡಿಯ ಗಡಿ ದಾಟಿಯೂ
ನಗು, ಸುಖ, ನೆಮ್ಮದಿ
ನಿಮ್ಮದಾಗಿರಲಿ....