Wednesday, 9 April 2014

ಮತ

ಮುಂದಿನ ವಾರ ಕರ್ನಾಟಕದಲ್ಲಿ ಲೋಕ ಸಭೆಗೆ ಚುನಾವಣೆ. ನಾವು ಅಂದರೆ ಮತದಾರರು ಪ್ರತಿಯೊಬ್ಬರೂ ತಪ್ಪದೇ ಮತಚಲಾಯಿಸಬೇಕು. ಅದು ನಮ್ಮ ಹಕ್ಕು. ಮತಚಲಾಯಿಸಲು ಯಾವುದೇ ಕಾರಣಕ್ಕೂ ತಪ್ಪಬಾರದು. ಸರಿಯಾದ ಅರ್ಹ ಅಭ್ಯರ್ಥಿಗೆ ಮತ ಹಾಕಬೇಕು. ಮತ ಚಲಾಯಿಸುವಾಗ ಜಾತಿ, ಧರ್ಮ, ಹಣ, ಹೆಂಡ ಮುಂತಾದ  ಆಮಿಷಗಳಿಗೆ ಬಲಿ ಬೀಳಬಾರದು. ಯಾಕೆಂದರೆ ಪ್ರಜಾಪ್ರಭುತ್ವ ಬಲಪಡಿಸಬೇಕು.
ಇದು ಎಲ್ಲಾ ರಾಜಕೀಯ ಮುಖಂಡರು, ಪಕ್ಷಗಳು ನಮಗೆ ನೀಡುವ ಪುಕ್ಕಟೆ ಸಲಹೆ.
ಮತ ಕೊಟ್ಟು ಅವರಲ್ಲಿ ಒಬ್ಬರನ್ನು ಚುನಾಯಿಸಿದ ಮೇಲೆ ನಮ್ಮ ಜವಾಬ್ದಾರಿ ಮುಗಿಯಿತು. ಆಮೇಲೆ ಅವರು ಆಡುವ ಆಟಗಳನ್ನು ನಾವು ಸುಮ್ಮನೆ ನೋಡುತ್ತಾ ಕುಳಿತುಕೊಳ್ಳಬೇಕು.
ಅದೇ ರಾಜಕೀಯ ಪಕ್ಷಗಳು ನಾವು ಸರಿಯಾದ ಅಭ್ಯರ್ಥಿಯನ್ನೆ ಚುನಾವಣೆಗೆ ನಿಲ್ಲಿಸುತ್ತೇವೆ. ಯಾವುದೇ ಆಮಿಷಗಳನ್ನು ಒಡ್ಡುವುದಿಲ್ಲ. ಜಾತಿಯನ್ನು ನೋಡಿ ಮತ ಹಾಕಿ ಎಂದು ಹೇಳುವುದಿಲ್ಲ. ಗೆದ್ದ ಮೇಲೆ ಪಕ್ಷಾಂತರ ಮಾಡುವುದಿಲ್ಲ. ಪಕ್ಷಾಂತರಿಗಳನ್ನು ಸೇರಿಸಿಕೊಳ್ಳುವುದಿಲ್ಲ ಎಂದು ನಮಗೆ ಖಾತ್ರಿ ಕೊಡುವುದಿಲ್ಲ. ಏಕೆಂದರೆ ಅದನ್ನೆಲ್ಲಾ ಅವುಗಳು ಮಾಡಲಾಗುವುದಿಲ್ಲ.
ಇದು ಪ್ರಜಾ ಪ್ರಭುತ್ವ. ನಾವು ಪ್ರಭುಗಳು. ಇದನ್ನು ನಾವು ನಂಬಬೇಕು.

Friday, 28 February 2014

ಡಾಂಭಿಕತೆ

'ನನ್ನ ತಾಯಿ ನಿನ್ನೆ ಸತ್ತು ಹೋದಳು. ಇಲ್ಲ ನಿನ್ನೆ ಅಲ್ಲ ಮೊನ್ನೆ ಇರಬೇಕು' ಹೀಗೆ ಶುರುವಾಗುತ್ತದೆ ಅಸಂಗತವಾದದ ಜನಕ ಅಲ್ಬರ್ಟ್ ಕಾಮುವಿನ ಕಾದಂಬರಿ ದಿ ಔಟ್ ಸೈಡರ್‍, ಎಂದು ಟಿ. ಪಿ. ಅಶೋಕರ 'ನವ್ಯ ಕಾವ್ಯದ ಪ್ರೇರಣೆಗಳು' ಎಂಬ ಪುಸ್ತಕದಲ್ಲಿ ಓದಿದ ನೆನಪು. ಈ ಸಮಾಜದ ಡಾಂಭಿಕತೆಯನ್ನು ವಿಡಂಬಿಸುವ ಕಾದಂಬರಿ ಅದು. ನಾವು ನಮ್ಮ ನಿಜವಾದ ಭಾವನೆಗಳನ್ನು ಅದುಮಿ ಸುಳ್ಳು ಸುಳ್ಳೇ ನಟಿಸುತ್ತ ಬದುಕುತ್ತಿರುತ್ತೇವೆ. ಆದರೆ ಇಷ್ಟು ಬರಡಾಗಿ ಬದುಕುವುದು ಸಾದ್ಯವಿಲ್ಲದಿದ್ದರೂ, ಸಹಜವಾಗಿ ಬದುಕುವುದೂ ಕಷ್ಟವಾಗಿದೆ. ಬೆತ್ತಲಾಗುವುದಿರಲಿ ಅರೆಬೆತ್ತಲಾದರೂ ಸುತ್ತ ಮುಖವಾಡ ಧರಿಸಿದವರು ನಮ್ಮ ಪಾಡಿಗೆ ಇರಲು ಬಿಡಲಾರರು. ಜಗವೇ ನಾಟಕ ರಂಗ ಎಂಬುದು ಈ ಅರ್ಥದಲ್ಲಿ ಸರಿ ಎನಿಸುತ್ತದೆ.. ಬರಬರುತ್ತ  ನಿಜ ಮುಖ ಯಾವುದು, ಮುಖವಾಡ ಯಾವುದು ಎಂಬುದೇ ತಿಳಿಯದಂತಾಗಿದೆ.......

Saturday, 25 January 2014

ನಗರಗಳತ್ತ ಮುಖ

ಎಲ್ಲ ರಸ್ತೆಗಳೂ ನಗರಗಳತ್ತ ಮುಖ ಮಾಡಿವೆ. ಸಮವಸ್ತ್ರ ತೊಟ್ಟ ಮಕ್ಕಳನ್ನು ಹೊತ್ತ ವಾಹನಗಳು ಮಣ್ಣು ರಸ್ತೆಯಿಂದ ಜಲ್ಲಿ ರಸ್ತೆಗೆ ನಂತರ ಟಾರು ರಸ್ತೆಗೆ ತಲುಪಿ ಕಾನ್ವೆಂಟ್ ಗಳತ್ತ ಹೋಗುತ್ತಿವೆ. ಟಿಫನ್ ಕ್ಯಾರಿಯರ್‍ ತುಂಬಿಕೊಂಡ ಬ್ಯಾಗ್ ಹೊತ್ತ ಜನ ಕೆಲಸಕ್ಕೆ ನಗರಕ್ಕೆ ಹೋಗುವ ಬಸ್ ಹತ್ತುತ್ತಿದ್ದಾರೆ. ನಗರವನ್ನು ಸಂಪರ್ಕಿಸುವ ರಸ್ತೆ ಹಳ್ಳಿಗಳತ್ತಲೂ ಹೋಗುತ್ತದೆ ಎನ್ನುತ್ತಾರೆ. ಇದು ಹಾಗಲ್ಲ. ಬೆಟ್ಟದಲ್ಲಿ ಹುಟ್ಟಿದ ನದಿ ಸಮುದ್ರದ ಕಡೆ ಹೋಗುವ ಹಾಗೆ ಅನ್ನಿಸುತ್ತಿಲ್ಲವೇ ? ಮೊಳಕೆಯೊಡೆದ ಚಿಗುರು ಬೆಳಕಿನೆಡೆ ಮುಖ ಎತ್ತಿ ಮೇಲು ಮೇಲಕ್ಕೆ ಬೆಳೆಯುತ್ತ ಗಗನದೆಡೆ ಕತ್ತು ಚಾಚಿದ ಹಾಗೆಯೇ ? ಅಂಥ ಚಿಗುರಿಗೆ ಬೇರಿನ ಮೂಲಕ ನೆಲದ ನಂಟು ಬೇಕೇ ಬೇಕು. ಆದರೆ ನಗರಕ್ಕೆ ಹೊರಟ ಮನುಷ್ಯನಿಗೆ............... ಒಂದೆಡೆ ಈ ವಲಸೆಯನ್ನು ತಡೆದು ಭುವಿಯ, ಬದುಕಿನ ಸ್ವಾಸ್ಥ್ಯವನ್ನು ಕಾಪಾಡಬಹುದಾದ ವ್ಯವಸ್ಥೆಗೆ ಅದರಲ್ಲಿ ಆಸಕ್ತಿ, ಪುರುಸೊತ್ತಿಲ್ಲ. ಇನ್ನು ಇದರಿಂದ ಲಾಭ ಪಡೆಯುವ ಹಿತಾಸಕ್ತಿಗಳು ತಮ್ಮೆಲ್ಲ ಶ್ರಮ ವಹಿಸಿ ದುಡಿಯುತ್ತಿವೆ. ಅಥವಾ ಅಂಥ ಹಿತಾಸಕ್ತಿಗಳ ಕೈಯಲ್ಲೇ ವ್ಯವಸ್ಥೆ ಇದೆಯೇ ?......

Thursday, 23 January 2014

ಭೀಮೇಶ್ವರ (ಸಕಲೇಶಪುರ)


ಇಲ್ಲಿ ಹರಿಯುತ್ತಿರುವುದು ಎತ್ತಿನ ಹಳ್ಳ. ಮುಂದೆ ಇದೇ ಕೆಂಪು ಹೊಳೆ, ನಂತರ ನೇತ್ರಾವತಿ. ಮೇಲೆ ಹೋಗುತ್ತಿದೆ ನೋಡಿ ಗೂಡ್ಸ್ ರೈಲು, ಅದು ಇಲ್ಲಿಂದ ಮುಂದೆ ಸಾಗಿ ದೋಣಿಗಲ್ಲು, ಮಾರನಹಳ್ಳಿ, ಎಡಕುಮರಿ ಮುಖಾಂತರ ಸುಬ್ರಹ್ಮಣ್ಯ ತಲುಪುತ್ತದೆ. ಈ ರೈಲು ದಾರಿಯಲ್ಲಿ ೫೦-೫೫ ಸುರಂಗಗಳು ಅಷ್ಟೇ ಸೇತುವೆಗಳು ಸಿಗುತ್ತವೆ. ಅತಿ ಹೆಚ್ಚು ಅಂದರೆ ಒಂಬೈನೂರು ಮೀಟರ್‍ ಉದ್ದದ ಸುರಂಗವೊಂದಿದೆ. ಮಧ್ಯ ಸುರಂಗದಲ್ಲಿ ಇದ್ದರೆ ಹಿಂದೆಯೂ, ಮುಂದೆಯೂ ಬೆಳಕು ಗೋಚರಿಸುವುದೇ ಇಲ್ಲ. ನೂರಕ್ಕೆ ನೂರು ಕತ್ತಲಾಗಿರುತ್ತದೆ. ಕಣ್ಣುಗಳು ವ್ಯರ್ಥ ಎನ್ನಿಸುವಂತಹ ಅನುಭವ.
    ಇಲ್ಲ ಬಿಡಿ, ನೀವು ಇಲ್ಲಿ ನನ್ನ ಹಾಗೆ ಭೀಮೇಶ್ವರನ ಸನ್ನಿಧಿಯಲ್ಲಿ (ಭೀಮ ಪೂಜಿಸಿದ್ದರಿಂದ ಶಿವನಿಗೆ ಆ ಹೆಸರು)  ನಿಂತು ಈ ದೃಶ್ಯವನ್ನು ನೋಡುವಂತಿಲ್ಲ. ಯಾಕೆ ?
    " ಯಾಕೆಂದರೆ, ಇದು ನಮ್ಮ ಸ್ವಂತ ಪ್ರೈವೇಟ್ ಜಾಗ. ನಮಗೆ ಯಾಕೆ ರಿಸ್ಕು ಸುಮ್ಮನೆ. ನಾವು ಗೌರ್‍ಮೆಂಟಿಂದ ಯಾವುದೇ ಸಹಾಯ ತಗೊಂಡಿಲ್ಲ.'' ಎನ್ನುತ್ತಾರೆ ಆ ಎಸ್ಟೇಟಿನ ಒಡೆಯ ವಿಜಿ. ಪಾಪ ಅವರು ಸಕಲೇಶಪುರದ ನಿರಂಜನ ಅವರ ಕೋರಿಕೆಯ ಮೇರೆಗೆ ನಮಗೆ ಅಲ್ಲಿಗೆ ಹೋಗಲು ಅನುವು ಮಾಡಿಕೊಟ್ಟರು.
    ಏನಪ್ಪಾ ಹಳ್ಳದ ತೀರದಲ್ಲಿರುವ ದೇವರನ್ನು ನೋಡುವುದಕ್ಕೂ ಇವರದೇನಪ್ಪಾ ತಕರಾರು ಎಂದು ನೀವಂದುಕೊಳ್ಳಬಹುದು ಇಲ್ಲ ಇವರು ಮೊದಲಿಂದ ಹೀಗೆ ರಫ್ ಆಗಿದ್ದವರಲ್ಲ. ಜನ ಸಹಜವಾಗಿ ಬಂದು ನೀರಲ್ಲಿ ಕೈಕಾಲು ತೊಳೆದೋ, ಸ್ನಾನ ಮಾಡಿಯೋ ದೇವರ ದರ್ಶನ ಮಾಡಿ ಹೋಗುತ್ತಿದ್ದರು. ಬರ ಬರುತ್ತಾ ಪ್ರವಾಸೋದ್ಯಮ, ನಾಗರೀಕತೆ ಬೆಳೆದಂತೆ (ಇದು ವಿಪರ್‍ಯಾಸ) ಬೇರೆಯದೇ ತರದ ಜನ ಬರತೊಡಗಿದರು. ಆಗ ಇವರಿಗೆ ಸ್ವಲ್ಪ ಕಿರಿಕಿರಿಯಾದರೂ ಸಹಿಸಿಕೊಂಡು ಬರತೊಡಗಿದರು. ಯಾಕೆಂದರೆ ಪ್ರಕೃತಿ ಸಹಜವಾದ ಸೌಂದರ್ಯವನ್ನು, ದೇವರನ್ನು ನೋಡಲು ತಡೆಯುವುದು ಸರಿಯಲ್ಲ ಎಂದು.
    ಆಮೇಲಾಮೇಲೆ ಎಲ್ಲ ಅತಿಯಾಗತೊಡಗಿತು. " ಡ್ರಿಂಕ್ಸ್ ತಗೊಳ್ಳೋದು, ನಾನ್,  ವೆಜ್ ಮತ್ತೆ ಹುಡ್ಗೀರು, ಡ್ಯಾನ್ಸು. ಇಲ್ಲೆಲ್ಲ ಎಷ್ಟು ಗಲೀಜು ಮಾಡ್ತಾರೆ ಅಂದ್ರೆ ನಮಗೆ ಅದನ್ನು ಕ್ಲೀನ್ ಮಾಡ್ಲಿಕ್ಕೆ ಒಂದು ದಿನ ಸಾಕಾಗುವುದಿಲ್ಲ. ಮತ್ತೆ ನಮ್ಮ ಕೆಲಸದವರೂ ಅಷ್ಟೇ ಬೇರೆಯವರು ತಿಂದ ಗಲೀಜನ್ನೆಲ್ಲಾ ಕ್ಲೀನು ಮಾಡ್ಲಿಕ್ಕೆ ಒಪ್ಪಲ್ಲ. ಎಂತೆಂಥದೋ ರಿಸ್ಕು"  ಇವರು ಕಾನೂನಿನ ತೊಡಕಿನಲ್ಲಿ ಸಿಲುಕಿಕೊಂಡದ್ದೂ ಉಂಟಂತೆ ಪಾಪ.
    "ಇದರ ಸಾವಾಸವೇ ಬೇಡ ಅಂತೇಳಿ ಕಾಂಪೌಂಡ್ ಮಾಡ್ಸಿ ಗೇಟಿಗೆ ಬೀಗ ಹಾಕಿದ್ದೇವೆ." ಅಂದು ನಿರಾಳರಾದರು. ಅಲ್ಲಿ ಆಗಾಗ ಸಾಂಪ್ರದಾಯಿಕ ಭಕ್ತರ ಮದುವೆಂತಹ ಸಮಾರಂಭಗಳು ಸರಳವಾಗಿ ಈಗಲೂ ನಡೆಯುತ್ತವೆ. ದೇವಸ್ಥಾನಕ್ಕೆ ಗರ್ಭ ಗುಡಿಯಿಲ್ಲ. ಮೇಲ್ಚಾವಣಿಯ ದೇವಸ್ಥಾನ. ಗೋಡೆಗಳಿಲ್ಲ. ತುಂಬ ಪ್ರಶಾಂತವಾದ ವಾತಾವರಣ. ಸುತ್ತ ಕಾಫಿ ತೋಟ.


ನಾನು ತಿರುಪತಿಗೆ ಹೋಗಿದ್ದಾಗಲೂ ಹುಂಡಿಗೆ ಕಾಣಿಕೆ ಹಾಕಿದವನಲ್ಲ. ತಿಮ್ಮಪ್ಪನಂಥ ದೇವರಿಗೆ ನಾನು ಕೊಡಲು ಶಕ್ತನೇ. ನನ್ನ ಸಾಲವನ್ನು ಮನಸ್ಸು ಮಾಡಿದರೆ ತಿಮ್ಮಪ್ಪ ತೀರಿಸಬಹುದೇ ಹೊರತು, ತಿಮ್ಮಪ್ಪನ ಸಾಲವನ್ನು ತೀರಿಸಲು ನಾನು ಸಹಾಯ ಮಾಡುತ್ತೇನೆನ್ನುವುದು ಅಹಂಕಾರವಾದೀತು. ಆದರೆ ಇಲ್ಲಿನ ವಾತಾವರಣ ನೋಡಿ ಮನಸ್ಸು ಪ್ರಫುಲ್ಲವಾಯಿತು. ತಣ್ಣಗೆ ಕೂತು ಧ್ಯಾನ ಮಾಡಲು ಹೇಳಿ ಮಾಡಿಸಿದ ವಾತಾವರಣ. ನೀರು ಹರಿಯುವ ಶಬ್ದ. ತೋಟದಲ್ಲಿ ಹಕ್ಕಿಗಳ ಚಿಲಿಪಿಲಿ -ಅರ್ಥವಾಗದ ಆದರೆ ಅನಿರ್ವಚನೀಯ ಅನುಭವ ನೀಡುವ - ಮಾತುಕತೆ. ಹುಂಡಿಯಲ್ಲಿ ಒಂದು ನೋಟು ತುರುಕಿ, ನಮಸ್ಕರಿಸಿದೆ. ದೇವರಿಗಲ್ಲ ಅಲ್ಲಿನ ಪರಿಸರಕ್ಕೆ.
 


ವಾಪಾಸು ಮೇಲೆ ಹತ್ತಿ ಬರುವಾಗ ನಮಗೆ ಬಾಯಾರಿಕೆ ಆಗುತ್ತಿತ್ತು. ಆದರೆ ಅವರು ಸ್ಮೂತ್ ಆಗಿದ್ದರು. " ನೋಡಿ ಇವರೇ, ನಿಮ್ಮಂತವರು ಬಂದರೆ ಪರವಾಗಿಲ್ಲ. ಒಮ್ಮೆ ನೋಡಿ ಐದಾರು ಜನ ಬಂದ್ರು. ಹೀಗೆ ಯಾರೋ ಪರಿಚಯದ ರೆಸಾರ್ಟ್‌ನವರು ಕಳುಹಿಸಿದ್ದರು. ಒಂದರ್ಧ ಗಂಟೆ ಇದ್ದು ಹೋಗ್ತೇವೆ ಅಂದ್ರು. ಮಧ್ಯಾಹ್ನ ಹನ್ನೆರಡಕ್ಕೆ ಬಂದವರು ಸಂಜೆ ಐದಾದರೂ ಹೊರಡುವ ಸೂಚನೆಯೇ ಇಲ್ಲ. ಹೋಗಿ ಕೇಳಿದ್ರೆ " ರೀ ನಾವು ಹಣ ಕೊಟ್ಟು ಬುಕ್ ಮಾಡಿ ಬಂದಿದ್ದೇವೆ. ನೀವ್ಯಾರ್‍ರೀ ಕೇಳೊಕೆ ಅಂತ ನಮಗೇ ದಬಾಯಿಸಿದ್ರು." ......  ಅವರವರ ಕಷ್ಟ ಅವರವರಿಗೆ. ನಾವು ಯಾರದೋ ಜಾಗದಲ್ಲಿದ್ದೇವೆ ಅಂದುಕೊಂಡು ಮನಸೋಇಚ್ಛೆ ವರ್ತಿಸಬಾರದೆನ್ನುವ ಪ್ರಜ್ಞೆ ನಮಗೂ ಇರಬೇಕು. ನಾವು ನೋಟಕ್ಕೆ ಮಾತ್ರ ನಾಗರೀಕರು. ನಡವಳಿಕೆಯಲ್ಲೂ ಅದನ್ನು ಅನುಸರಿಸಬೇಕಲ್ಲವೇ ? ಅವರಿಗೆ ವಂದನೆಗಳನ್ನು ಹೇಳಿ ಹೊರಟೆವು.