Wednesday, 24 July 2013

ಅಮ್ಮ ಕಾಲವಾಗಿ ಇಂದಿಗೆ ಮೂರು ತಿಂಗಳು. ನೆನಪುಗಳು ಮಳೆಯ ಜೊತೆಗೇ ಸುರಿಯುತ್ತವೆ. ನಾವು ಮನಸ್ಸು ಕೊಡಬೇಕಷ್ಟೆ. ...... ಅಮ್ಮ ಹೋದ ದಿನ ಅಲ್ಲಿ ಸೇರಿದವರು-ವಿಶೇಷವಾಗಿ ನಮ್ಮೂರ ಜನ- ತೋರಿದ ಸಹಕಾರ ಮರೆಯುವಂಥದ್ದಲ್ಲ. ಹಳ್ಳದ ಈಚೆ ಕಡೆ ಬಿಳುವಿನಕೊಪ್ಪ ಮತ್ತು  ರಾಮಸ್ವಾಮಿ ಮನೆಯಿಂದ ಪ್ರಾರಂಭಿಸಿ ಆಚೆ ಕಡೆ ಪುರುಷೋತ್ತಮ, ಕಮ್ಮಕ್ಕಿ ರವಿ ಮನೆಯವರವರೆಗೆ - ಜನ ತೊರಿದ ಸಹಕಾರ ಮರೆಯುವಂಥದ್ದಲ್ಲ. ನನ್ನ ಸ್ನೇಹಿತ ನಾರಾಯಣ್ "ನೀವು ಆ ಸಂಬಂದವನ್ನು ಉಳಿಸಿಕೊಳ್ಳುವುದು ನಿಮ್ಮ ಜವಾಬ್ದಾರಿ " ಎಂದು ಹೇಳುತ್ತಿದ್ದರು..  ಅದು ಅಮ್ಮಗಳಿಸಿದ ವಿಶ್ವಾಸವೇ? ನನ್ನ ತಮ್ಮಂದಿರು-ಉಮೇಶ, ರವಿ- ಸಂಪಾದಿಸಿದ್ದೇ ? ಅಥವಾ ಅಮ್ಮನ ಭಾಷೆಯಲ್ಲಿ ಹೇಳುವುದಾದರೆ ಪೂರ್ವಾರ್ಜಿತ ಪುಣ್ಯವೇ?  ಎಲ್ಲವೂ ಹೌದಿರಬಹುದು. ಆದರೆ ನನ್ನ ಪ್ರಕಾರ  ಅದಕ್ಕಿಂತ ಮುಖ್ಯವಾಗಿ ಅದು ನಮ್ಮೂರಿನ-ಹೊಕ್ಕಳಿಕೆಯ-ಗುಣ ವಿಶೇಷ. ನಮ್ಮ ನಮ್ಮಲ್ಲಿ ಭಿನ್ನಾಭಿಪ್ರಾಯವಿಲ್ಲವೆಂದಲ್ಲ. ಆದರೆ ಕಷ್ಟ-ಸುಖದಲ್ಲಿ ಅದನ್ನೆಲ್ಲ ಲೆಕ್ಕ ಹಾಕುತ್ತಾ ಯಾರೂ ಕುಳಿತುಕೊಳ್ಳುವುದಿಲ್ಲ. ನಮ್ಮೂರಿನವರು ಪರಸ್ಪರ ತೋರಿಸುವ ಆಸ್ಥೆಯೇ ಅಂಥದ್ದು. ಅಮ್ಮ ತೀರಿಕೊಂಡದ್ದು ಬೆಳಿಗ್ಗೆ ಸುಮಾರು ಹತ್ತು ಗಂಟೆಯ ಹೊತ್ತಿಗೆ. ಅಂತ್ಯ ಕ್ರಿಯೆ ಶುರುವಾದದ್ದು ಮರುದಿನ ಬೆಳಿಗ್ಗೆ. ಸುಮಾರು ಇಪ್ಪತ್ತನಾಲ್ಕು ಗಂಟೆಗಳ ಕಾಲ ನಮ್ಮ ಮನೆಯಲ್ಲಿ  ನಮ್ಮ ಊರಿನ ಹಲವಾರು ಜನ ಇದ್ದೇ ಇರುತ್ತಿದ್ದರು- ಶಿಫ್ಟಿನ ಮೇಲೇನೋ ಎಂಬಂತೆ. ಅದರಲ್ಲೂ ರಾತ್ರಿ ಅಮ್ಮನನ್ನು ಕಾಯುತ್ತಾ ಕೂರುವ ......... ಏನೆಂದು ಹೇಳಲಿ ಅಂಥ ಕೆಲಸಕ್ಕೆ ನಮ್ಮೂರಿನ ಸುಮಾರು ಹತ್ತು ಹದಿನೈದು ಜನ ರಾತ್ರಿ ಇಡೀ ಕಣ್ಣು ಮುಚ್ಚದೇ  ಅದೂ ಇದೂ ಮಾತಾಡುತ್ತಾ ಕೂತೇ ಇದ್ದರು. ಅದರಲ್ಲೂ ಪುರುಷೋತ್ತಮ, ಪ್ರಭಾಕರ ನಂಥ ಹಿರಿಯರು ಕೂತದ್ದು ನಾನು ಮರೆಯಲಾರೆ. ಜೊತೆಗೆ ಮಾಧವ ಮಾವ ರಾತ್ರಿ ಇಡೀ ಕಣ್ಣು ಮುಚ್ಚದೇ ಕೂತಿದ್ದ..... ಬೆಳಗಾಯಿತು.....ಆಗಲೇ ಬೇಕು..... ಆದರೆ, ಎಂದಿನಂತೆ ನಾವು ಏಳುವ ಹೊತ್ತಿಗೆ ಮುಚೆಕಡೆ ಗುಡಿಸುತ್ತಲೋ, ಹೂ ಕುಯ್ಯುತ್ತಲೋ, ಮಕ್ಕಳಿಗೆ ಮುಖ ತೊಳೆಸುತ್ತಲೋ ಯಾವುದೋ ಬಾಗಿಲಲ್ಲಿ ಕಾಣುತ್ತಿದ್ದ ಅಮ್ಮನ  ಮುಖ ಇನ್ನು ಕಾಣುವಂತಿರಲಿಲ್ಲ.... ಸಣ್ಣವನಿದ್ದಾಗ ಬೆಳಿಗ್ಗೆ ಅರೆ ನಿದ್ರೆಯಲ್ಲಿ, ಅಮ್ಮ ರೇಡಿಯೋದಲ್ಲಿ ಕೇಳಿಸುತ್ತಿದ್ದ ಭಕ್ತಿ ಗೀತೆಗಳೇ ಈಗಲೂ ನನ್ನ ಅತ್ಯಂತ ಅಚ್ಚುಮೆಚ್ಚು. ಅವುಗಳ ಸಂಗೀತದ ಕಾರಣಕ್ಕೋ, ಅಥವಾ ಸಾಹಿತ್ಯದ ಕಾರಣಕ್ಕೋ ಅಲ್ಲ. ಅವುಗಳನ್ನು ನಾನು ಕೇಳಿದ್ದ ಕಾಲದ ನೆನಪನ್ನು ಹೊತ್ತು ತರುವ ಕಾರಣಕ್ಕೆ...... ಪ್ರಭಾಕರ ಬಂದು " ಸ್ನಾನ ಮಾಡಿ" ಎಂದ. ಊರವರು ಒಬ್ಬೊಬ್ಬರಾಗಿ ಬರಲು ಪ್ರಾರಂಭಿಸಿದರು....... ನಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೆ ಜನ ಸೇರಿದಾಗ ನಮ್ಮ ತಪ್ಪುಗಳನ್ನು ಹುಡುಕಿ ಗದರುತ್ತಿದ್ದ ಅಮ್ಮ ಇರಲಿಲ್ಲ......

No comments:

Post a Comment