Wednesday, 24 July 2013

(ಅಮ್ಮ ಹೊರಟು ಹೋಗಿ ಎರಡು ತಿಂಗಳು...... [ ಜ್ಯೇಷ್ಠ ಶುದ್ಧ ಚತುರ್ದಶಿ. ಜೂನ್ 22] )
ಏಪ್ರಿಲ್ ನ ರವರವ ಬಿಸಿಲು ಅಮ್ಮನ ಬಲಗಾಲಿನ ಮೇಲೆ ಬೀಳುತ್ತಿತ್ತು. ಸಾಲದ್ದಕ್ಕೆ ನನ್ನ ಕೈಲಿದ್ದ ಮಡಕೆಯಲ್ಲಿನ ಬೆಂಕಿಯ ಶಾಖ ಬೇರೆ. ಕಾಲುಗಳನ್ನು ಮಡಚಿ ನೆರಳಿಗಿಡುವ ಅನಿಸುತ್ತಿತ್ತು. ಆದರೆ ದೇಹವನ್ನು ಚಟ್ಟಕ್ಕೆ ಹಗ್ಗದಿಂದ ಬಿಗಿಯಲಾಗಿತ್ತು. ಈ ಕಾಲುಗಳನ್ನು ನಾನು ಸಣ್ಣಲ್ಲಿಂದ ನೋಡಿಕೊಂಡು ಬಂದಿದ್ದೇನೆ. ಹಾಗೆಂದು ನಾನು ಆಗಾಗ್ಗೆ ಅಮ್ಮನ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುವ ಅಭ್ಯಾಸದವನಲ್ಲ. (ಒಂದು ವಾರದ ಮೊದಲು ಯುಗಾದಿಗೆ ಊರಿಗೆ ಹೋಗಿ ಹೊರಡುವ ಮೊದಲು ಅಮ್ಮನ ಹತ್ತಿರ ಹೋಗಿ ಬರುತ್ತೇನೆ ಎಂದು ಹೇಳಲೂ ಸಾಧ್ಯವಾಗಿರಲಿಲ್ಲ. ನಾನು ಹೊರಡುವ ಸಮಯದಲ್ಲಿ ಅವಳು ಮಲಗಿದ್ದಳು. ಅವಳನ್ನು ಎಬ್ಬಿಸುವ ಮನಸ್ಸಾಗದೇ ಹಾಗೇ ಬಂದಿದ್ದೆ. ಕಡೆಗೂ ಅವಳು ನನಗೆ ಹೇಳದೇ ಹೋಗಿಬಿಟ್ಟಳು) ಅಥವಾ ಅಮ್ಮ ತನ್ನ ಕಾಲುಗಳಿಂದ ನನ್ನ ಒದ್ದೂ ಇಲ್ಲ. ನಾನು ಚಿಕ್ಕವನಿದ್ದಾಗ ಅಮ್ಮನ ಸೀರೆಯ ನೆರಿಗೆಯನ್ನು ಕಾಲ ಬುಡದಲ್ಲಿ ಕುಳಿತು ಸರಿಪಡಿಸಿದ ನೆನಪು; ಅಮ್ಮನ ಕಾಲುಂಗುರವನ್ನು ಹಾಕುವುದಕ್ಕೋ, ತೆಗೆಯುವುದಕ್ಕೋ, ಸರಿಪಡಿಸುವುದಕ್ಕೋ, ಅಥವಾ ಸುಮ್ಮನೆ ಹಾಗೇ ಕಾಲುಂಗುರವನ್ನು ಆಡಿಸಿದ ನೆನಪು ; ಅವಳಿಗೆ ಬೆನ್ನು ನೋವು ಅತಿಯಾದಾಗ ಅವಳ ಬೆನ್ನ ಮೇಲೆ ನನ್ನ ಕಾಲುಗಳಿಂದ ತುಳಿದ ನೆನಪು; ಕಾಲು ನೀಡಿ ಕೂತು ಹೂ ಕಟ್ಟುತ್ತಲೋ, ಓದುತ್ತಲೋ, ಬತ್ತಿ ಹೊಸೆಯುತ್ತಲೋ ಇದ್ದಾಗ ಆ ಕಾಲುಗಳನ್ನು ನೋಡಿದ ನೆನಪು. ನನ್ನನ್ನು ಊಟಕ್ಕೆ ಕೂರಿಸಿ ತಾನು ಬಡಿಸುತ್ತಾ, ನನ್ನ ಪಕ್ಕ ನಿಂತಾಗ ಆಕೆಯ ಕಾಲುಗಳನ್ನು ನೋಡಿದ ನೆನಪು; ತೀರಾ ಇತ್ತೀಚೆಗೆ ಕಳೆದ ವರ್ಷ ಯಡಿಯೂರಪ್ಪನವರ ರಾಜೀನಾಮೆ ಷೋ ನಡೆಯುತ್ತಿದ್ದಾಗ ತಿ. ನರಸೀಪುರದ ನಮ್ಮ ಮನೆಯ ಕುರ್ಚಿಯ ಮೇಲೆ ಕುಳಿತು, ಸೋಫಾದ ಮೇಲೆ ಕಾಲು ನೀಡಿ ಟಿ.ವಿ. ನೋಡುತ್ತಾ ( ಹಾಗೆ ಆರಾಮಾಗಿ ಕುಳಿತುಕೋ ಎಂದು ನಾನೇ ಆಕೆಗೆ ಹೇಳಿದ್ದೆ ; ಆದರೂ ನಾನು ಹೋದ ತಕ್ಷಣ ಆಕೆ ಕಾಲುಗಳನ್ನು ಕೆಳಗಿಳಿಸುತ್ತಿದ್ದಳು ) ಬತ್ತಿ  ಹೊಸೆಯುತ್ತಾ " ಅಲ್ಲ ಯಡಿಯೂರಪ್ಪ ರಾಜೀನಾಮೆ ಕೊಡೋದೇ ಇಲ್ವಂತಲ್ಲ ಮಾರಾಯ "  ಎಂತಲೋ ಇನ್ನೇನೋ ಹೇಳಿ ಆ ಕ್ಷಣದ ಸುದ್ದಿಯನ್ನು ಅಪ್ ಡೇಟ್ ಮಾಡಿದ ನೆನಪು.. ..
ನನ್ನ ಕಣ್ಣುಗಳಿಂದ ಬೀಳುತ್ತಿದ್ದ ಹನಿಗಳಿಗೂ ಅಮ್ಮನ ಪಾದದ ಬಿಸಿಯನ್ನು ಆರಿಸುವ ಭಾಗ್ಯವಿರಲಿಲ್ಲ.... ಏಕೆಂದರೆ ಅಮ್ಮನ ಆ ಕಾಲು ಆ ಕ್ಷಣ ನನ್ನ ಕಣ್ಣೀರ ಪರಿಧಿಯಿಂದ ಆಚೆ ತೀರದಲ್ಲಿತ್ತು............
(ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದು ಇಲ್ಲಿ ಈಗ ಪ್ರಕಟಿಸುತ್ತಿದ್ದೇನೆ.)

No comments:

Post a Comment