Wednesday, 28 December 2011

ಕನ್ನಡ‌


ಕನ್ನಡದ ವಿಷಯ ಮತ್ತೆ ಮತ್ತೆ ಚರ್ಚೆಯ ಮಂಚೂಣಿಗೆ ಬರುತ್ತಿದೆ. ಒಂದು ಕಡೆ ಕನ್ನಡದ ಸಾಹಿತಿಗಳಿಗೆ ಜ್ಞಾನ ಪೀಠ ಸಿಗುತ್ತಿದೆ. ಕನ್ನಡದ ಸಿನಿಮಾಗಳು ರಾಷ್ಟ್ರೀಯ, ಅಂತರ ರಾಷ್ಟೀಯ ಮಟ್ಟದಲ್ಲಿ ಪ್ರಶಸ್ತಿ ಗಳಿಸುತ್ತಿವೆ. ಕನ್ನಡ ಭಾಷಿಕರು ವಿದೇಶಿ ನೆಲದಲ್ಲಿ ಕನ್ನಡದ ಕಹಳೆ ಮೊಳಗಿಸುತ್ತಾರೆ. ಆದರೂ ಇವು ಯಾವುದೂ ಭಾಷೆಯ ಅವನತಿಯ ನಮ್ಮ ಗಾಬರಿಯನ್ನು ಕಡಿಮೆ ಮಾಡುತ್ತಿಲ್ಲ ಏಕೆ?
ಮುಖ್ಯವಾಗಿ ಚರ್ಚೆಯ ಸಂದರ್ಭಗಲ್ಲಿ ತಾತ್ವಿಕ ಸ್ಪಷ್ಟತೆ ಇಲ್ಲದೆ ಯಾರು ಏನು ಹೇಳುತ್ತಿದ್ದಾರೆ ಎಂದು ಗೊತ್ತಾಗದೆ ಗದ್ದಲವೇ ಕೇಳಿಸುತ್ತಿದೆ. ಹಾಗಾಗಿ ಇದು ಇಂಗ್ಲೀಷ್ ಬೇಕು ಬೇಡ ಎಂಬುದರ ಚರ್ಚೆಯೋ, ಕನ್ನಡ ಬೇಕು ಬೇಡ ಎಂಬುದರ ಚರ್ಚೆಯೋ ಆಗಿ ಬಿಡುತ್ತಿದೆ.ಭಾಷೆಯ ಚರ್ಚೆಯೋ, ಮಾದ್ಯಮದ ಚರ್ಚೆಯೋ ತಿಳಿಯುವುದಿಲ್ಲ. ಯಡಿಯೂರಪ್ಪನವರು ಮುಖ್ಯ ಮಂತ್ರಿಯಾಗಿದ್ದಾಗ ನಮ್ಮ ತಂಟೆಗೆ ಬಂದರೆ ನಿಮ್ಮ ಪುರಾಣವನ್ನು ಬಿಚ್ಚುತ್ತೇನೆ ಎಂದು ಕಡತ ತೋರಿಸಿ ಹೆದರಿಸಿದ ಹಾಗೆ ಕನ್ನಡ ಬೇಕು ಎಂದು ಹೇಳುವವರಿಗೆ ನಿಮ್ಮ ಮಕ್ಕಳು ಮೊಮ್ಮಕ್ಕಳು ಇಂಗ್ಲೀಷ್ನಲ್ಲಿ ಓದುತ್ತಿಲ್ಲವೇ ಎಂದು ಕೇಳುವಂತಾಗಿದೆ.ಇಂಗ್ಲೀಷ್ ಬೇಕು ಎಂದು ಹೇಳುವವರು ನಮ್ಮ ಮಕ್ಕಳಿಗೆ ಉದ್ಯೋಗ ಬೇಕು. ಹಾಗಾಗಿ ಇಂಗ್ಲೀಷ್ ಬೇಕು ಎನ್ನುತ್ತಿದ್ದಾರೆ. ಎರಡೂ  ವಾಸ್ತವ. ವಾಸ್ತವವಾಗಿ ಎರಡು ಭಾಷೆಗಳು ಬೇಕು.
ಇದಕ್ಕೆ ಸಂಬಂದಿಸಿದ ಹಾಗೆ ಅಂಕಣಕಾರ ರಾಮಚಂದ್ರ ಗುಹಾ ನವಂಬರ್ ೪ ರ ಪ್ರಜಾವಾಣಿಯಲ್ಲಿ ಬರೆದಿದ್ದಾರೆ. ( ನಾನು ಅದನ್ನು ಕಾರಣಾಂತರದಿಂದ ತಡವಾಗಿ ಓದಿದೆ) ಅದರಲ್ಲಿ ಅವರು ದ್ವಿಭಾಷಿಕತೆಯ ಬಗ್ಗೆ ಪ್ರಸ್ತಾಪಿಸಿತ್ತಾರೆ. ಬಾಲ್ಯವನ್ನು ವಿದೇಶದಲ್ಲಿ ಕಳೆಯಬೇಕಾಗಿ ಬಂದ ಗಾಂಧಿಯ ಮಕ್ಕಳಿಗೆ ಗಾಂಧಿಯ ಹಟದಿಂದಾಗಿ ಅವರ ಮಾತೃ ಭಾಷೆ ಹಾಗು ಅಲ್ಲಿನ ಪರಿಸರದಿಂದಾಗಿ ಇಂಗ್ಲೀಷ್ ಎರಡು ದಕ್ಕುತ್ತವೆ.
ಮುಖ್ಯವಾಗಿ ನಮ್ಮನ್ನಾಳುವ, ಶಿಕ್ಷಣ ನೀತಿ ರೂಪಿಸುವವರಿಗೆ ತಾತ್ವಿಕ ಸ್ಪಷ್ಟತೆಯೇ ಇಲ್ಲ. (ಅಥವಾ ತಾತ್ವಿಕತೆಯೇ ಇಲ್ಲ ಎಂದರು ಸರಿಯಾದೀತು) ಹಾಗಾಗಿ ಏಕ ಕಾಲಕ್ಕೆ ಎರಡು ತಪ್ಪುಗಳಾಗುತ್ತಿವೆ. ಗಾಂಧೀಜಿಯ ಮಕ್ಕಳಿಗೆ ಸಹಜವಾಗಿ ದಕ್ಕಿದ ದ್ವಿಭಾಷಿಕತೆ ನಮ್ಮಲ್ಲಿ ಯಾವ ವರ್ಗಕ್ಕೂ ಸಾಧ್ಯವಾಗುತ್ತಿಲ್ಲ. ಒಂದು ವರ್ಗದ ಜನ ಪ್ರಜ್ಞಾಪೂರ್ವಕವಾಗಿ ಇಂಗ್ಲಿಷನ್ನು ಕಲಿತು, ಕನ್ನಡ ಮರೆತು - ಅನಂತಮೂರ್ತಿಯವರ ಭಾಷೆಯಲ್ಲಿ ಹೇಳುವುದಾದರೆ - ಸಾಂಸ್ಕೃತಿಕ ಬೇರುಗಳಿಗೆ ಸಂಪೂರ್ಣವಾಗಿ ವಿಮುಖರಾಗುತ್ತಿದ್ದಾರೆ. ಇನ್ನೊಂದು ವರ್ಗದ ಜನ ಮುಚ್ಚುವ ಸ್ಥಿತಿಗೆ ಬಂದ ಸರ್ಕಾರಿ ಶಾಲೆಗಳಿಂದ , ಸರ್ಕಾರದ ತಪ್ಪು ನೀತಿಗಳಿಂದ ಅಥವಾ ದ್ವಂದ್ವ ನೀತಿಗಳಿಂದ ಶಿಕ್ಷಣದಿಂದಲೇ ವಂಚಿತರಾಗುತ್ತಿದ್ದಾರೆ. ಕನ್ನಡದ ಕೋಲು ಹಿಡಿದು ಸರ್ಕಾರವನ್ನು ಹೆದರಿಸುವವರು ಈ ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕು. ಪ್ರಪಂಚಕ್ಕೆ ತೆರೆದುಕೊಳ್ಳಲು, ಉದ್ಯೋಗ ಗಿಟ್ಟಿಸಲು ಇಂಗ್ಲೀಷ್ ಬೇಕು ಎನ್ನುವ ಹಾಗು ನಮ್ಮತನ, ಸಂಸ್ಕೃತಿ ಉಳಿಸಿಕೊಳ್ಳಲು ಕನ್ನಡ ಬೇಕು ಎನ್ನುವ ಎರಡು ವಾದಗಳ ನಡುವೆ ವಾಸ್ತವ ಇದೆ.
ನಾನು ತಿಳಿದಂತೆ ನಮ್ಮ ಕನ್ನಡಿಗ ಮೇಲು ವರ್ಗದ ಮಂದಿಯಲ್ಲಿ ಇರುವಷ್ಟು ಮಾತೃ ಭಾಷೆಯ ಬಗೆಗಿನ ಅವಜ್ಞೆ ಬೇರೆ ಕಡೆ ಕಾಣೆ. ಉದಾಹರಣೆಗೆ ನನ್ನ ಸ್ನೇಹಿತರೊಬ್ಬರು ಕಂಪನಿಯೊಂದರ ಮಾರಾಟ ವಿಭಾಗದಲ್ಲಿ ಕೆಲಸ ಮಾಡುತ್ತಾರೆ. ಅವರು ಹೇಳುತ್ತಾರೆ : ತಮಿಳುನಾಡು, ಕೇರಳ, ಆಂದ್ರ ಎಲ್ಲೇ ಹೋದರೂ ಅಲ್ಲಿಯ ಕಂಪನಿಯ ಮುಖ್ಯಸ್ಥರು ನನ್ನ ಹತ್ತಿರ ಮಾತ್ರ ಇಂಗ್ಲೀಷ್ ನಲ್ಲಿ ಮಾತಾಡುತ್ತಾರೆ. ಅವರ ಸಹವರ್ತಿಗಳ ಜೊತೆಗೆ ಅವರ ಮಾತೃ ಭಾಷೆಯಲ್ಲಿಯೇ ವ್ಯವಹರಿಸುತ್ತಾರೆ. ಆದರೆ ಕರ್ನಾಟಕದಲ್ಲಿ ಮಾತ್ರ ಪರಿಸ್ಥಿತಿ ಭಿನ್ನ.
ನಾವು ಈ ವಿಷಯದಲ್ಲಿ ನಮ್ಮ ನಾಡಿನವರೇ ಆದ ತುಳು ಭಾಷಿಕರಿಂದ ಕಲಿಯಬಹುದು. ಇತ್ತೀಚಿಗೆ ಒಂದು ನಾಗಮಂಡಲ ಕಾರ್ಯಕ್ರಮದಲ್ಲಿ ಚನ್ನೈನಲ್ಲಿ ನೆಲೆಸಿರುವ ಒಂದು ತುಳು ಕುಟುಂಬವನ್ನು ಕಂಡೆ. ಚನ್ನೈನಲ್ಲೇ ಹುಟ್ಟಿ ಬೆಳೆದ ಅವರ ಮಗನಿಗೆ ತಮಿಳು ಗೊತ್ತು, ತುಳು ಗೊತ್ತು. ಕನ್ನಡ ಇಲ್ಲ. ರಾಜಾಸ್ಥಾನದಿಂದ ಬಂದು ಇಲ್ಲಿ ನೆಲೆಸಿರುವ ವ್ಯಾಪಾರಸ್ಥ ಕುಟುಂಬಗಳ ಇಲ್ಲಿಯೇ ಹುಟ್ಟಿ ಬೆಳೆದ ಮಕ್ಕಳು ರಾಜಾಸ್ಥಾನಿ ಭಾಷೆಯಲ್ಲಿಯೇ ಅವರ ವ್ಯವಹಾರದ ಲೆಕ್ಕ ಪತ್ರಗಳನ್ನು ಬರೆಯುವುದನ್ನು ನೋಡಿದ್ದೇನೆ.
ನಮ್ಮತನವನ್ನು ಉಳಿಸಿಕೊಳ್ಳಬೇಕು. ಅದು ಎಲ್ಲ ವರ್ಗದವರಿಗೂ ಆವಶ್ಯ. ನಮ್ಮ ಹೆಸರಿನ ಹಿಂದೆ ನಮ್ಮ ಊರು, ತಂದೆಯ ಹೆಸರನ್ನು ಇನಿಷಿಯಲ್ಸ್ ಎಂದು ಇಟ್ಟುಕೊಂಡಿರುತ್ತೇವೆ. ಮುಂದೆ ಪಾಸ್ ಪೋರ್ಟ್ಗೋ ವಿಸಾಕ್ಕೋ ಅದರ ವಿವರಣೆ ಕೊಡುವುದೇ ನಮಗೆ ಕಷ್ಟ ಎನ್ನುವುದಾದರೆ ಅದು ನಮ್ಮ ಬೌದ್ದಿಕ ದಿವಾಳಿತನ ಅಲ್ಲ, ಅತಿ ಬೌದ್ದಿಕತೆಯ ದುರಂತ. 

No comments:

Post a Comment