Friday, 8 January 2016

ಹೊಸ ದೃಷ್ಟಿ.

ಪಾಕೀಸ್ತಾನದ ವಿಷಯದಲ್ಲಿ ಭಾರತ ತನ್ನ ಕಾರ್ಯತಂತ್ರವನ್ನು ಬದಲಾಯಿಸಿಕೊಳ್ಳಬೇಕಾಗಬಹುದು. ನವಾಜ್ ಷರೀಪರು ಭಾರತದ ಜೊತೆಗಿನ ಸಂಬಂಧದ ಸುಧಾರಣೆಯ ಪರವಾಗಿದ್ದಾರೆ ಎಂದು ನಾವು ನಂಬುವುದಾದರೆ, ನಾವು ಅದನ್ನು ಪರಿಗಣಿಸಬೇಕು ಮತ್ತು ಸೇನೆ ಹಾಗೂ ಐಎಸ್‌ಐ ಷರಫರಿಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ನಾವು ಅಂದುಕೊಂಡಿದ್ದರೆ, ಅವೆರಡನ್ನೂ ಕಡೆಗಣಿಸಿ ನಾವು ಷರೀಫರೊಂದಿಗೆ ಮಾತುಕತೆ ಮುಂದುವರೆಸಲು ಅನುವಾಗಬೇಕು. ಪಠಾಣ್ ಕೋಟ್ ಮೇಲಿನ ಧಾಳಿಯು ಮೋದಿ  ಪಾಕೀಸ್ತಾನಕ್ಕೆ ದಿಢೀರನೆ ಭೇಟಿ ನೀಡಿ, ಷರೀಫ್ ರ ಕೈ ಕುಲುಕಿ ಶಾಂತಿ ಮಾತುಕತೆ ಮುಂದುವರಿಕೆಗೆ ತೋರಿದ ಉತ್ಸಾಹಕ್ಕೆ ತಣ್ಣೀರೆರೆಚುವುದಕ್ಕೆ ಸೇನೆ ಹಾಗೂ ಐಎಸ್‌ಐ ಮಾಡಿದ ಕುತಂತ್ರ ಎನ್ನುವುದಾದರೆ, ನಾವು ಆ ಕುತಂತ್ರಕ್ಕೆ ಪ್ರತಿ ತಂತ್ರ ಹೂಡುವುದು ಒಳ್ಳೆಯದು. ಪಾಕೀಸ್ತಾನದೊಳಗೆ ಸೇನೆ ಮತ್ತು ಐಎಸ್‌ಐ ಗಳನ್ನು ಹದ್ದುಬಸ್ತಿನಲ್ಲಿಡುವುದು ಷರೀಫರಿಗೆ ಬಿಟ್ಟ ವಿಷಯ. ನಾವು ಅವರಿಗೆ ಪ್ರೋತ್ಸಾಹ ನೀಡಬೇಕು. ಭಾರತ ಮತ್ತು ಪಾಕ್ ಎರಡೂ ಕಡೆ ಉಭಯ ದೇಶಗಳ ಸಂಬಂಧವನ್ನು ಸುಮಧುರಗೊಳಿಸುವುದಕ್ಕೆ ಜನರ ಒಲವಿದೆ ತಾನೇ ? ಹಾಗಾದರೆ ನಾವಿನ್ನೂ ಹಳೆಯ ಕಗ್ಗಂಟುಗಳ ನಡುವೆ ಸಿಲುಕಿ ಅಲ್ಲಲ್ಲೇ ಒದ್ದಾಡುವುದನ್ನು ಬಿಡಬೇಕು. ಕಡೆಗೂ ವಿರೋಧ ಪಕ್ಷಗಳು (ವಿರೋಧಿಸುವುದಕ್ಕಾಗಿಯೇ ಇರುವ ಪಕ್ಷಗಳು) ಒಂದಷ್ಟು ಹುಯಿಲೆಬ್ಬಿಸಬಹುದು. ಆದರೂ, ಸಧ್ಯ ಭಾರತದಲ್ಲಿ ಮೋದಿಗಿರುವ ಜನಪ್ರಿಯತೆ ಮತ್ತು ಸಂಖ್ಯಾ ಬಲ ಅಂಥ ವಿರೋಧವನ್ನು ಮೆಟ್ಟಿ ನಿಲ್ಲುವ ಶಕ್ತಿ ಕೊಡುತ್ತದೆ. ಅಂತಿಮವಾಗಿ ಅದು ಸಕಾರಾತ್ಮಕ ಪರಿಣಾಮ ಬೀರಬಹುದು ಎಂದು ನಾವು ನಂಬಬೇಕು. ಎರಡೂ ಕಡೆ ಒಮ್ಮೆ ಸಂಬಂಧ ಸುಧಾರಣೆಯ ವಿರೋದಿಗಳನ್ನು, ಮತ್ತೊಮ್ಮೆ ಪರವಾಗಿರುವವರನ್ನು ಮಗದೊಮ್ಮೆ ಅಂತರರಾಷ್ಟ್ರಿಯ ಹಿತಾಸಕ್ತಿಗಳನ್ನು ಓಲೈಸುವ ನಾಟಕ ಆಡುತ್ತಾ ಕಾಲ ಕಳೆಯುವ ಬದಲು ಹೀಗೊಮ್ಮೆ ಪ್ರಯತ್ನಿಸುವುದು ಒಳ್ಳೆಯದಲ್ಲವೇ ?

No comments:

Post a Comment