Tuesday, 2 April 2013

ನಿನ್ನೆ ಮೈಸೂರಿನಲ್ಲಿ ಒಂದು ಟಾಯ್ಲೆಟ್ ಗೆ ಹೋಗಿದ್ದೆ. ನೀರು ಟ್ಯಾಂಕ್ ತುಂಬಿ ಸುರಿದು ಹೋಗುತ್ತಿತ್ತು. ನೀರು ಚೆಲ್ಲಿ ಹೋಗುತ್ತಿದೆಯಲ್ಲಪ್ಪಾ ಅಂದೆ. ಅದನ್ನು ನೋಡಿಕೊಳ್ಳುವಾತ ಹ್ಞೂ ಸಾರ್‍ ಅಂದ. ನಿಲ್ಲಿಸೋಕೆ ಆಗಲ್ವೆ ? ಎಂದು ಕೇಳಿದರರೆ ಇಲ್ಲ ಎಂಬ ಉತ್ತರ. ನೀರಿಗೆ ಬಹಳ ಕಷ್ಟ ಅಂದೆ. ನಮಗೆ ಬೇಜಾನ್ ಬತ್ತದೆ ಅಂದ.ಪ್ರಾಕೃತಿಕ ಸಂಪನ್ಮೂಲಗಳನ್ನು ನಮ್ಮ ಸ್ವಂತ ಆಸ್ತಿಯ ಹಾಗೆ ಪೋಲು ಮಾಡಿದರೆ ಹೇಗೆ ? ನಾವು ವ್ಯರ್ಥ ಮಾಡುವ ಒಂದೊಂದು ಗುಟುಕು ನೀರೂ ಇನ್ನೊಬ್ಬ ಬಾಯಾರಿ ದಣಿದವನ ದಾಹ ತೀರಿಸಬಲ್ಲ ಅಮೂಲ್ಯ ಜೀವ ಜಲ ಎಂದು ನಾವು ತಿಳಿಯದಿದ್ದರೆ ಹೇಗೆ ? ಹೀಗಾಗಿಯೇ ಕನ್ನಡಿಗನ ಕಷ್ಟ ತಮಿಳರಿಗೆ, ತಮಿಳಿಗನ ಕಷ್ಟ ಕನ್ನಡಿಗರಿಗೆ ಅರ್ಥವಾಗದೇ ಇದೆಯೇ ? ಗ್ಲೋಬಲೈಜೇಷನ್ ನಿಂದ ಹೀಗೆ ಭೂಮಿಯ ಒಂದು ತುದಿಯಲ್ಲಿರುವವನ ಕಷ್ಟ ಇನ್ನೊಂದು ತುದಿಯಲ್ಲಿರುವವನಿಗೆ ಅರ್ಥವಾಗಿ ಪರಸ್ಪರ ಸಹಾಯ ಹಸ್ತ ನೀಡಬಹುದು ಎಂದು ನನ್ನಂತಹವರು ಭಾವಿಸಿದ್ದೆವು. ಹಾಗಾಗಲಿಲ್ಲವಲ್ಲ. ! ಇದು ಕಟ್ಟ ಕಡೆಯ ಮನುಷ್ಯನ ಮಾತಾಯಿತು. ಬಿಡಿ.

ಇನ್ನು ವಿಶ್ವದ ಶ್ರೇಷ್ಟ ಆರ್ಥಿಕ ತಜ್ಞ, ನಮ್ಮ ಪ್ರಧಾನಿ ಮನಮೋಹನಸಿಂಗರ ಮುಕ್ತ ಆರ್ಥಿಕ ನೀತಿಯಿಂದ ಭಾರತಕ್ಕೆ ಅವಕಾಶದ ಬಾಗಿಲುಗಳೇ ತೆರೆದು ಆಲಗೂಡು ಕೆರೆಯ ಮಣ್ಣಲ್ಲಿ ಬೆಳೆದ ಕೊತ್ತಂಬರಿ, ಪುದಿನ ಸೊಪ್ಪನ್ನು ಅಮೆರಿಕಾದ ಬೀದಿಗಳಲ್ಲಿ ಮಾರಬಹುದು ಎಂಬ ನನ್ನಂತಹವರ ಕಲ್ಪನೆ ಸುಳ್ಳಾಗಿದೆ. ಈಗ ನಮ್ಮ ಹಿತ್ತಲಲ್ಲಿ ಬೆಳೆದು ಲಿಂಕ್ ರಸ್ತೆಯ ಮರದ ಅಡಿಯಲ್ಲಿ ಮಾರುತ್ತಿರುವ ಕರಬೂಜ ಹಣ್ಣೂ ಕೂಡ ಇನ್ನು ಮುಂದೆ ವಾಲ್ ಮಾರ್ಟ ರಕ್ಕಸನ ಕೈಗೆ ಸಿಕ್ಕು ಅವನ ಮಾರ್ಟಿನ ತಂಪು ಗಾಜಿನ  ಬೀರೊಳಗೆ ಕೂತು ನನ್ನಂತಹವನನ್ನು ಅಣಕಿಸುತ್ತವೆ.

ಮಾಜಿ ಪ್ರಧಾನಿ ದೇವೇಗೌಡರಂತಹ - ರೈತರನ್ನು ಅರ್ಥಮಾಡಿಕೊಂಡಿದ್ದಾರೆ, ಅವರ ಪರವಾಗಿದ್ದಾರೆ ಎಂದು ನಾವು ತಿಳಿಯಬಹುದಾದ - ನಾಯಕರೇ " ಆರ್ಥಿಕ ನೀತಿಯ ರಿವರ್ಸ್ ಗೇರ್‍ ಸಾಧ್ಯವಿಲ್ಲ. " ಎಂದು ಪ್ರಧಾನಿಯಾಗಿದ್ದಾಗಲೇ ಹೇಳಿಬಿಟ್ಟಿದ್ದಾರಲ್ಲ. !

ಹರಕೊಲ್ಲಲ್ ಪರಕಾಯ್ವನೇ..... 

No comments:

Post a Comment