Friday, 17 July 2015

ಅಮ್ಮನ ನೆನಪು


ಮೈಸೂರಲ್ಲಿ ಬಸ್ಸು ಹತ್ತಿ ಕುಳಿತಿದ್ದೇನೆ ಮೂಡಬಿದರೆಯ ಕಡೆಗೆ. ಪಕ್ಕದಲ್ಲಿದ್ದ ಮಡದಿಯ ಜೊತೆ ಮಾತಾಡುತ್ತ ನೆನಪುಗಳು ಸುರುಳಿ ಬಿಚ್ಚಿಕೊಳ್ಳುತ್ತವೆ. ನಾವು ಹಿಂದಿನ ಬಾರಿ ಮೂಡಬಿದರೆಯ ತಮ್ಮನ ಮನೆಗೆ ಹೋಗಿದ್ದು ಅವನ ಮಗನ ಉಪನಯನದ ಸಂದರ್ಭದಲ್ಲಿ-ಸುಮಾರು ಎರಡೂವರೆ ವರ್ಷಗಳ ಕೆಳಗೆ. ಆಗ ನನ್ನ ಅಪ್ಪ-ಅಮ್ಮ ಇಬ್ಬರೂ ಬದುಕಿದ್ದರು. ನಾವು ಉಪನಯನದ ಎರಡು ದಿನ ಮೊದಲೇ ಅಲ್ಲಿಗೆ ಹೋದೆವು. ಅಲ್ಲಿಗೆ ಬರುವವರಿದ್ದ ಅಪ್ಪ-ಅಮ್ಮ ಅವರೊಟ್ಟಿಗೆ, ನಾನು ನನ್ನ ಮಗ ಹೆಂಡತಿಯ ಜೊತೆ ಎರಡು ದಿನ ಕಾಲ ಕಳೆಯುವ ಆಸೆ ನನ್ನದು. ಮುಂದೆ ಎಂಥ ದಿನಗಳು ಬರುತ್ತವೋ ಏನೋ ಎಂದುಕೊಂಡೇ ಆ ಯೋಚನೆ ಮಾಡಿದ್ದೆ. ಇರುವ ದಿನಗಳನ್ನು ಚೆನ್ನಾಗಿ ಅನುಭವಿಸಿಬಿಡಬೇಕು ಎನ್ನುವವ ನಾನು. ಬದುಕು ಕ್ಷಣಿಕ ಎಂದು ಶಂಕರಾಚಾರ್ಯರು ಹೇಳಿದರೂ ಅಷ್ಟೆ, ಅಲ್ಬರ್ಟ್ ಕಮು ಹೇಳಿದರೂ ಅಷ್ಟೆ. ಆದರೆ ಶಂಕರಾಚಾರ್ಯರು ಈ ಬದುಕು ಕ್ಷಣಿಕ, ಇದನ್ನು ನೆಚ್ಚಿಕೊಳ್ಳಬೇಡ ಎಂದರೆ, ಆಲ್ಬರ್ಟ್ ಕಮು ಇದು ಕ್ಷಣಿಕ ಆದುದರಿಂದ ಇದನ್ನು ಅರ್ಥಪೂರ್ಣವಾಗಿ ಬದುಕು ಎನ್ನುತ್ತಾನೆ. ಲಂಕೇಶ್ ಇದನ್ನು ತಮ್ಮ ಲೇಖನಗಳಲ್ಲಿ ಹೆಚ್ಚು ಅರ್ಥವತ್ತಾಗಿ ವಿವರಿಸುತ್ತಿದ್ದರು. ನಾನು ಅವರಿಂದ ಕಲಿತೆ... ಇರಲಿ. ಮಾತು ಎತ್ತೆತ್ತಲೋ ಹೋಗುತ್ತಿದೆ. 
ಅಮ್ಮನಿಗೆ ಸಂಬಂಧ ಪಟ್ಟ ಒಂದು ಘಟನೆ ನೆನಪಾಗುತ್ತಿದೆ. ಅಮ್ಮ ಕೆಲವು ಉಡುಗೊರೆಗಳನ್ನು ತಂದಿದ್ದಳು. ನನಗೆ ತೋರಿಸಿದಳು. "ಇದು ಸುರೇಶನಿಗೆ, ಇದು ಮಲ್ಲಿಕನಿಗೆ, ಇದು ಸುದರ್ಶನನಿಗೆ... " ಎಂದು ಇನ್ನೊಂದನ್ನು ತೋರಿಸಿ " ಇದನ್ನು ಚಿನ್ನಿಗೆ ಎಂದು ಇಟ್ಟಿದ್ದೇನೆ. ಈಗಲೇ ಕೊಟ್ಟು ಬಿಡುತ್ತೇನೆ. ಅವಳ ಮದುವೆಯ ಹೊತ್ತಿಗೆ ನಾನು ಇರುತ್ತೇನೋ ಇಲ್ಲವೋ " ಎಂದಳು. ನನಗೆ ಪಿತ್ತ ನೆತ್ತಿಗೇರಿತು. " ಅದೆಲ್ಲ ಯಾಕೀಗ ? ಕೊಡಬೇಕು ತಾನೇ. ಕೊಟ್ಟು ಬಿಡು " ಎಂದೆ. ನಾನು ಅವಳು ಜಗಳಾಡುವ ಶೈಲಿಯಲ್ಲಿ ಮಾತಾಡಿದ್ದೇ ಹೆಚ್ಚು. ಕೊಟ್ಟೂ ಬಿಟ್ಟಳು. ಅವಳ ಅನುಮಾನದ ಹಾಗೇ ಹೇಳದೇ ಕೇಳದೇ ಹೊರಟೂ ಹೋದಳು.......